Tuesday, October 30, 2007

ಗಾದೆ - ನಾಣ್ಣುಡಿ

ಗಾದೆಗಳು ಮನುಷ್ಯನ ಜೀವನಕ್ಕೆ ಕನ್ನಡಿ ಹಿಡಿದಂತೆ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಗಾದೆಗಳು ಹೇಳದ ವಿಷಯವೇ ಇಲ್ಲ ಗಾದೆಗಳು ಅನುಭವೋಕ್ತಿಗಳು.ಇವು ಸಮಾಜದ ಪ್ರತಿಬಿಂಬಗಳೂ ಆಗಿದೆ.ಗಾದೆಗಳು ಸುಭಾಷಿತಗಳಂತೆ ತಿಳುವಳಿಕೆ ನೀಡಬಲ್ಲುದಾಗಿದೆ .ಗಾದೆ-ನಾಣ್ಣುಡಿಗಳು ಚಿಕ್ಕ ಚಿಕ್ಕ ವಾಕ್ಯಗಳಾಗಿ ಕಂಡರೂ ಅವು ಅರ್ಥಗರ್ಭಿತವಾಗಿರುತ್ತದೆ .ಸಾಮಾಜಿಕ ಮೌಲ್ಯಗಳನ್ನು ತಿಳಿಯುವಲ್ಲಿ ಗಾದೆಗಳ ಅರಿವು ಕೊಂಚಮಟ್ಟಕ್ಕಾದರು ಇರುವುದು ಸೂಕ್ತ.ಮೇಲೂ ನೋಟಕ್ಕೆ ಗೋಚರಿಸುವ ಅರ್ಥಕ್ಕಿಂತ ವಿಸ್ತಾರವಾದ ಬೇರೊಂದು ಅರ್ಥವು ಗಾದೆಗಳಲ್ಲಿ ವ್ಯತಿರಿಕ್ತವಾಗಿರುತ್ತದೆ.ಗಾದೆಗಳ ಪ್ರತ್ಯೇಕ ಪದಗಳ ಅರ್ಥವಷ್ಟೆ ಮುಖ್ಯವಾಗದೆ ಒಟ್ಟು ಅರ್ಥ ಅಮೂಲ್ಯವೆನಿಸುತ್ತದೆ. ಗಾದೆಗಳಲ್ಲಿ ಸಾಹಿತ್ಯದ ಸೊಗಸು ಎದ್ದು ಕಾಣುತ್ತದೆ.

1)"ರಾತ್ರಿ ಮುಳುಗಿದ ಕೂಡಲೇ ಹಗಲು"

ಹಗಲು ರಾತ್ರಿ ಪ್ರಕೃತಿಯಲ್ಲಿ ಒಂದಾದ ಮೇಲೊಂದರಂತೆ ಬರುತ್ತಲೇ ಇರುತ್ತದೆ ರಾತ್ರಿ ಕತ್ತಲೆಯಾದರೆ ಹಗಲು ಬೆಳಕು,ರಾತ್ರಿ ದುಃಖದ ಸಂಕೇತವಾದರೆ ಹಗಲು ಸುಖ ಸಂತೋಷದ ಸಂಕೇತ.ರಾತ್ರಿ ಎಂಬ ಕಷ್ಟವನ್ನು ಕಳೆದಂತೆ ಮರಳಿಬರದೆ ಮತ್ತೊಂದು ಹಗಲೆಂಬ ಸುಖವ ನೀಡುವನು ದಿನಕರನು ಲೋಕಕ್ಕೆ ಅಲ್ಲವೇ? ಸುಖ ದು:ಖಗಳು ಸಮನಾಗಿ ಸಾಗಿದರೆ ಜೀವನದ ಪಯಣವು ಸುಗಮವಾಗಿರುತ್ತದೆ. ಒಂದು ಉದಾಹರಣೆ:ಶ್ರೀರಾಮನು ಸೀತೆಯನ್ನು ಕಳೆದುಕೊಂಡು ದುಃಖವನ್ನು ಅನುಭವಿಸಿದ ಆದರೆ ಅವನ ಪ್ರಯತ್ನದಿಂದಲೇ ಸೀತೆಯನ್ನು ಹುಡುಕಿ ಸೆರೆವಾಸದಿಂದ ಮುಕ್ತಗೊಳಿಸಿ ಕರೆತರುವನು ಹೀಗೆ ಎಲ್ಲರ ಜೀವನದಲ್ಲೂ ಸುಖದುಖ:ಗಳ ಸಮಿಶ್ರತೆಯಿರುವುದು ಸಹಜ.ರಾತ್ರಿಯೆಂಬ ಕತ್ತಲು-ದುಖ: ಹಗಲೆಂಬ ಬೆಳಕು-ಸುಖವೂ ಲಭಿಸುತ್ತದೆ ಇದರಲ್ಲಿ ಅಚಲವಾದ ನಂಬಿಕೆ ಇರಬೇಕು.ಸುಖದ ದಿನಗಳು ಗೊತ್ತಾಗುವುದೇ ಇಲ್ಲ.ಕಷ್ಟದ ದಿನಗಳು ನಮ್ಮೆಡೆಗೆ ಸಮೀಪಿಸುತ್ತಿದ್ದಂತೆ ,ನಮ್ಮ ಮನಸ್ಸಿಗೆ ಭಾರವಾಗಿ ಅರಿವಾಗುತ್ತಾ ಬರುವುದು , ರಾತ್ರಿ ಇದ್ದಂತೆ.ರಾತ್ರಿಯನ್ನ ಕಳೆಯುವುದು ಕಷ್ಟ,
ನಿದ್ರಿಸಲು ಕಲಿಯಬೇಕು... ಈ ಗಾದೆಯು ಮಾನವನಿಗೆ ವಿವೇಕ ಹೇಳುವಂತಾಗಿದೆ ,ಕಷ್ಟ ಬಂದಿತೆಂದು ಕುಗ್ಗದೆ ಸುಖದದಿನಗಳ ಆಗಮನಕ್ಕೆ ತಾಳ್ಮೆಯಿಂದ ಕಾಯಬೇಕು.ರಾತ್ರಿ ಕಳೆದಾಗಲೇ ಸುಖದ ಅರಿವುಂಟಾಗುವುದು.ಕಷ್ಟ ಅನುಭವಿಸಿದಾಗಲೇ ಸುಖದ ಬೆಲೆ ತಿಳಿಯುವುದು ಎಂಬುದು ಈ ಗಾದೆಯಲ್ಲಿ ಧ್ವನಿತವಾಗಿದೆ ......


2)"ಮುಳ್ಳಿಲ್ಲದ ಗುಲಾಬಿ ಇಲ್ಲ "
ಗುಲಾಬಿ ಒಂದು ಸುಂದರ ಪುಷ್ಪ.ಅದರೆ ಚೆಲುವಿಗೆ ಮಾರುಹೋಗದವರಾರು? ಹೆಣ್ಣು ಮಕ್ಕಳು ಗುಲಾಬಿ ಹೂ ಮುಡಿಯಲು ಆಸೆಪಡುತ್ತಾರೆ.ಸುಂದರ ಹಾರವನ್ನು ಕಟ್ಟುವಾಗ ನಡುನಡುವೆ ಗುಲಾಬಿ ಹೂ ಇದ್ದರೆ ಚೆನ್ನ.ಆದರೆ ಗುಲಾಬಿ ಹೂ ಬಿಡುವ ಗಿಡದಲ್ಲಿ ಮುಳ್ಳು ಇರುತ್ತದೆ. ಅಂದರೆ ಜಗತ್ತಿನಲ್ಲಿ ಪೂರಾಪರಿಪೂರ್ಣವಾಗಿರುವ ವಸ್ತು ಯಾವುದು ಇಲ್ಲ ಎಂದು ಈ ಗಾದೆಯು ಧ್ವನಿಸಿ ಹೇಳುತ್ತದೆ.

ನಮ್ಮಲ್ಲಿ ಅನೇಕ ಸದ್ಗುಣಗಳಿರಬಹುದು,ಇದ್ದೂ ಇರುತ್ತದೆ ಇವುಗಳ ನಡುವೆ ಕೆಟ್ಟ ಗುಣಗಳೂ ಒಂದೆರಡು ಇರದಿರುವುದಿಲ್ಲ.ಅಂದರೆ ಪರಿಪೂರ್ಣತೆ ಇಲ್ಲವೆಂದಂತಾಯಿತು.ಹಾಗೆಯೇ ಕೆಲವರು ಬಹಳಷ್ಟು ಕೆಟ್ಟ ಗುಣಗಳು ಇದ್ದಿರಲೂ ಸಾಕು "ಎಲ್ಲಾ ಜಾಣ ತುಸು ಕೋಣ" ಎಂಬ ಗಾದೆಯೊಂದನ್ನು ಹೊಂದಿಸಿ ಹೇಳಲು ಇಷ್ಟಪಡುತ್ತೇನೆ.ತುಂಬ ಒಳ್ಳೆಯವನಿರುತ್ತಾನೆ.. ಆದರೆ ಮೂಗಿನತುದಿಯಲ್ಲಿ ಕೋಪವಿರುತ್ತದೆ.ದುಷ್ಟನಾಗಿರುತ್ತಾನೆ.ಆದರೆ ದಯಾ ಗುಣವೊಂದಿಲ್ಲ ಅದೇ ಎದ್ದು ಕಾಣುತ್ತಿರುತ್ತದೆ.ಹೀಗೆ ಲೋಕದಲ್ಲಿ ದ್ವಂದ್ವಗಳಿದ್ದು ಪರಿಪೂರ್ಣನಾದವನನ್ನು ಕಾಣುವುದು ಕಷ್ಟವೆಂಬ ಮಾತು ಇಲ್ಲಿ ವ್ಯಕ್ತವಾಗಿದೆ.

3) "ಬಡ ದೇವರನ್ನು ಕಂಡರೆ ಬಿಲ್ವಪತ್ರೆಯೂ ಸಹ ಬುಸ್ ಅನ್ನುತ್ತೆ..."
ಸಂಕ್ಷಿಪ್ತವಾದ ಅರ್ಥ : ಜನರು ಕೇವಲ ಶ್ರೀಮಂತ ದೇವರುಗಳಿಗೆ ಮಾತ್ರ ಹರಕೆ, ಪೂಜೆ, ಪುನಸ್ಕಾರ ಮಾಡುತ್ತಾರೆ..ಬಡದೇವರನ್ನು ಮನುಷ್ಯರಿರಲಿ ಬಿಲ್ವಪತ್ರೆಯು ಕೂಡ ಕಡೆಗಣಿಸುತ್ತದೆ ಎಂಬುದು ಇದರ ಅರ್ಥ..

ನಮ್ಮ ಅದೂ ಭಾರತೀಯ ಸಮಾಜದಲ್ಲಿ ದೇವರಿಗೆ ವಿಶೇಷವಾದ ಸ್ಥಾನವಿದೆ... ಅದರ ಹೆಸರಿನಲ್ಲಿ ಅದೆಷ್ಟು ಗಲಭೆಗಳನ್ನು ಜಗತ್ತು ಕಂಡಿದೆಯೋ ಲೆಕ್ಕವಿಟ್ಟವರ್ಯಾರು.... ನಮ್ಮ ದೇಶದ ಕಡೆಗೆ ನೋಡೋಣ.... ಯಾವುದೇ ಮನುಷ್ಯ ಆಗಲಿ ಶಕ್ತಿಯನ್ನು ಅರಸುತ್ತಾನೆ..ದೇವರ ವಿಷಯದಲ್ಲೂ ಅಷ್ಟೇ...ಶಕ್ತಿ ದೇವರಿಗೇ ಹರಕೆ, ಪೂಜೆ, ಪುನಸ್ಕಾರ ಜಾಸ್ತಿ.. ಏಕೆಂದರೆ ಆ ದೇವರ ಬಳಿ ಸಲ್ಲಿಸಿದ ಕೋರಿಕೆ ಈಡೇರುವುದೆಂಬ ನಂಬಿಕೆ.... ಅದರ ಪಕ್ಕದಲ್ಲೇ ಉದ್ಭವ ಮೂರ್ತಿಯಿದ್ದರೂ ಜನರು ಅದನ್ನು ಪರಿಗಣಿಸುವುದೇ ಇಲ್ಲ... ಮೂರ್ತಿ ಎಷ್ಟೇ ಸುಂದರವಿದ್ದರೂ ಶಕ್ತಿಯಿಲ್ಲದಿದ್ದರೆ ವ್ಯರ್ಥ.. ದೇವರಿಗೂ ಕೂಡ ಹಣ ಮೇಲೆ ಮಣೆ ಹಾಕುತ್ತಾರೆ... ಕೆಲವೊಮ್ಮೆ ಭವ್ಯವಾಗಿ ದೇವಸ್ಥಾನವನ್ನ ಕಟ್ಟಿಸಿರುತ್ತಾರೆ..ಆದರೆ ಅದು ಅಷ್ಟೇನು ಪ್ರಸಿದ್ಧಿಯನ್ನು ಪಡೆದಿರುವುದಿಲ್ಲ....ಎಲ್ಲೋ ಬೀದಿ ಬದಿಯಲ್ಲಿ ಎದ್ದಿರುವ ದೇವರಿಗೆ ನೂಕು ನುಗ್ಗಲಿರತ್ತೆ....ಹಾಗೆ so called ಬಡ ದೇವರನ್ನ ನಿರ್ಲಕ್ಷಿಸಿರುತ್ತಾರೆ...so called ಶ್ರೀಮಂತ ದೇವರಿಗೆ ವಿಪರೀತ ಪೂಜೆ ಪುನಸ್ಕಾರ.....ದೇವರು ಎಲ್ಲರಿಗೂ ಸಮಾನ ನಾಗಿರಬೇಕಲ್ಲವೆ....ಅಷ್ಟಲ್ಲದಿದ್ದರೆ ತಿರುಪತಿ ತಿಮ್ಮಪ್ಪನಿಗೇಕೆ ಅಷ್ಟು ಮನ್ನಣೆ.....?? ಇದರಿಂದ ಬಡ ದೇವರು ಶ್ರೀಮಂತ ದೇವರುಗಳ ಮೇಲೆ ಅಸೂಯೆ ಪಡುವಂತಿದೆ... ಬಡ ದೇವರು ಶ್ರೀಮಂತ ದೇವರು...ಎಂಬೆಲ್ಲ ಇತ್ಯಾದಿ ಇತ್ಯಾದಿ ಎಲ್ಲಾ ಜನರ ಭಾವನೆಗಳ ಮೇಲೆ ನಿಂತಿರುತ್ತದೆ..ಅವರುಗಳ ಅನೂಕೂಲಗಳ ಆಧಾರದ ಮೇಲೆ ದೇವರನ್ನು ನಿಲ್ಲಿಸಿರುತ್ತಾರೆ....ದೇವರು ಬಡವನೂ ಅಲ್ಲ ಶ್ರೀಮಂತನೂ ಅಲ್ಲ.... ಮಿಡ್ಲ್ ಕ್ಲಾಸ್..ನಮ್ಮ ನಿಮ್ಮ ಹಾಗೆಯೆ... :-)


4)"ಸುಖದಲ್ಲಿ ಯುಗವೊಂದು ನಿಮಿಷ..ದು:ಖದಲ್ಲಿ ನಿಮಿಷವೊಂದು ಯುಗ....."

ಸಂಕ್ಷಿಪ್ತವಾದ ಅರ್ಥ: ಇದರಲ್ಲಿ ಹೆಚ್ಚೇನು ಹೇಳಬೇಕಾಗಿಲ್ಲ...ಗಾದೆಯೇ ಹೇಳಬೇಕಾದುದನ್ನು ಸಾರುತ್ತದೆ...ಸುಖದಲ್ಲಿ ಯುಗಗಳು ಕಳೆದರೂ ಕ್ಷಣಗಳು ಕಳೆದಂತೆ ತೋರುತ್ತದೆ...


ಸುಖದಲ್ಲಿ ಮೈಮರೆತವನು ಲೋಕವನ್ನೇ ಮರೆತಿರುತ್ತಾನೆ..ಆದರಿಲ್ಲಿ ತಿಳಿಯಬೇಕಾದುದು ಏನೆಂದರೆ..ಹಗಲು ಕಳೆದು ರಾತ್ರಿ ಬರುವುದು ಎಷ್ಟು ಸತ್ಯವೋ , ಸಹಜವೋ ಹಾಗೆ ಸುಖದಲ್ಲಿದ್ದವನಿಗೆ ಕಷ್ಟಗಳು ಬರುವುದು ಅಷ್ಟೆ ಸಹಜ..ಸುಖದಲ್ಲಿದ್ದಾಗ ಮೈಮರೆತವರಂತೆ ಕುಣಿದು ಕುಪ್ಪಳಿಸಿ, ಕಷ್ಟಗಳು ಬಂದೊಡನೆಯೆ ಇಡೀ ಲೋಕದ ಕಷ್ಟಗಳೆಲ್ಲ ತಮ್ಮ ಮೇಲೆ ಇದೆಯೇನೊ ಎಂಬಂತೆ ಹಾರಡುತ್ತಾರೆ...ಎರಡೂ ಒಂದೊಂದು ಬಗೆಯ ಹುಚ್ಚುತನಗಳೇ...ಸುಖದಲ್ಲಿದ್ದಾಗ ಎಲ್ಲವೂ ನಮ್ಮ ಪರ ನಡೆಯುತ್ತದಾದುದರಿಂದ ....ಕಷ್ಟಗಳು ಬಂದೊಡನೆಯೆ ದೇವಸ್ಥಾನದ ಮುಂದೆ ಸಾಲುಗಳು ಹೆಚ್ಚುತ್ತವೆ...ವರ್ಷದಲ್ಲಿ ಪ್ರತಿಯೊಬ್ಬನಿಗೂ ಒಂದಲ್ಲಾ ಒಂದು ಕಷ್ಟ ಇದ್ದೇ ಇರುವುದರಿಂದ ಅದರ ಸಾಲಂತೂ ಕಮ್ಮಿ ಆಗುವುದಿಲ್ಲ... ದೇವರ ಮೇಲೆ ಭಕ್ತಿ, ಭಾವದಿಂದ ಬರುವವರ ಸಂಖ್ಯೆ ನಿಜಕ್ಕೂ ಕಮ್ಮಿ.. ಹೀಗೆ ಸುಖ ಬಂದಾಗ ಕುಣಿವುದು ಬಿಟ್ಟು, ಕಷ್ಟ ಬಂದಾಗ ಗೋಳಾಡುವುದು ಬಿಟ್ಟು, ಎರಡನ್ನೂ ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು..ಜೀವನವೆಂಬ ಏರಿಳಿತದಲ್ಲಿ ಸುಖ-ದು:ಖ ದ ರಾಗ-ತಾಳದಲ್ಲಿ ನಿರ್ಲಿಪ್ತತೆಯಿಂದ ಹೆಜ್ಜೆಹಾಕುವ ಕೆಲಸ ಮಾತ್ರ ನಮ್ಮದಾಗಬೇಕು....